Thursday 12 January 2017

ಸ್ವೀಡನ್ನಿನ ಶಿಲಾಲೇಖದಲ್ಲಿ ಮಹಾಭಾರತಶ್ಲೋಕ

೧೯೨೦ರಲ್ಲಿ ಸ್ವೀಡನ್ನಿನ ಜೆಟೈರ್ಸ್ಟೀನ್ ಎಂಬವರು ಹಾವಸೆಗಳಿಂದ ಮುಚ್ಚಲ್ಪಟ್ಟಿದ್ದ ಶಿಲಾಲೇಖವೊಂದನ್ನು ಕಂಡರು. ಅವರಿಗೆ ದೇವನಾಗರೀ ಲಿಪಿಯ ಮತ್ತು ಸಂಸ್ಕೃತಭಾಷೆಯ ಪರಿಚಯವಿದ್ದಿದ್ದರಿಂದ ಇದು ಸಂಸ್ಕೃತದ ಶ್ಲೋಕವೆಂದು ಗುರುತಿಸಿದರು. ಆ ಶ್ಲೋಕ ಹೀಗಿತ್ತು –
                    ಯಾವಚ್ಚ ಮೇ ಧರಿಷ್ಯಂತಿ ಪ್ರಾಣಾ ದೇಹೇ ಶುಚಿಸ್ಮಿತೇ |
                                ತಾವತ್ ತ್ವಯಿ ಭವಿಷ್ಯಾಮಿ ಸತ್ಯಮೇತದ್ ಬ್ರವೀಮಿ ತೇ ||
          (ನಿರ್ಮಲಮಂದಹಾಸದವಳೇ ! ಎಲ್ಲಿಯವರೆಗೆ ನನ್ನ ಶರೀರದಲ್ಲಿ ಪ್ರಾಣಗಳಿರುವುದೋ ಅಲ್ಲಿಯವರೆಗೂ ನಿನ್ನಲ್ಲಿ ಪ್ರೀತಿಯುಳ್ಳವನಾಗಿರುತ್ತೇನೆ. ಇದು ಸತ್ಯ !)
          ಸ್ವಾರಸ್ಯವೆಂದರೆ ಇದು ಮಹಾಭಾರತದ ನಲೋಪಾಖ್ಯಾನದಲ್ಲಿ ಬರುವ ಶ್ಲೋಕ. ಈ ಪ್ರೇಮಸಂದೇಶದ ಹಿನ್ನೆಲೆಯನ್ನರಸಿದವರಿಗೆ ಸಿಕ್ಕಿದ ಮಾಹಿತಿ ಆಶ್ಚರ್ಯಕರವಾಗಿತ್ತು. ಇದನ್ನು ಕೆತ್ತಿಸಿದವನ ಹೆಸರು ಫೆಡರಿಕ್-ಟುಲ್-ಬರ್ಗ್ (೧೮೦೨-೧೮೫೩). ಸಂಸ್ಕೃತಪ್ರೇಮಿಯಾಗಿದ್ದ ಇವರು ಉಪ್ಸಲ್ ವಿಶ್ವವಿದ್ಯಾಲಯದ ಪ್ರಾಚ್ಯಭಾಷಾವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು. ಸಂಸ್ಕೃತ, ಹಿಬ್ರೂ, ಸಿರಿಯಾ ಇತ್ಯಾದಿ ಪ್ರಾಚೀನಭಾಷೆಗಳಲ್ಲಿ ಅಸದಳ ಒಲವು ಇವರಿಗಿತ್ತು. ಇವರು ತಮ್ಮ ತಾರುಣ್ಯದಲ್ಲಿ ಸೋಫಿಯಾ ಎಂಬವಳನ್ನು ಪ್ರೀತಿಸಿದ್ದರು. ಆಕೆಯ ನೆನಪಿಗಾಗಿ ಕೆತ್ತಿಸಿದ್ದ ಶಿಲಾಲೇಖವಿದು. ಮುಂದೆ ಜೆಟೈರ್ಸ್ಟೀನರವರೆಗೂ ಸುಮಾರು ೯೦ ವರ್ಷಗಳ ಕಾಲ ಯಾರ ಗಮನಕ್ಕೂ ಬಂದಿರಲಿಲ್ಲ. ಈಗ ಈ ಶಿಲೆಯುರುವ ಬೆಟ್ಟ ’ಮೌಂಟ್ ಎಂಗೇಜ್ಮೆಂಟ್’ ಎಂದು ಪ್ರಸಿದ್ದವಾಗಿ ಪ್ರವಾಸಿಕೇಂದ್ರವಾಗಿ ಜನರನ್ನು ಸೆಳೆಯುತ್ತಿದೆ.

          ಸ್ವಾಮಿ ವಿವಾಕಾನಂದರಿಗಿಂತ ಪೂರ್ವದಲ್ಲಿ, ಮ್ಯಾಕ್ಸ್ ಮುಲ್ಲರ್ ಹುಟ್ಟುವ ಮುನ್ನ ವಿದೇಶಗಳಲ್ಲಿ ಸಂಸ್ಕೃತದ ಪರಿಚಯವಿದ್ದಂತಿಲ್ಲ. ಈ ಹಿನ್ನೆಲೆಯಲ್ಲಿ, ಅಷ್ಟು ಹಿಂದೆಯೇ ಸಂಸ್ಕೃತದಲ್ಲಿ ಪ್ರಕೃತ ಶಿಲಾಲೇಖ ಕೆತ್ತಿಸಲ್ಪಟ್ಟಿರುವುದು ಸಾಮಾನ್ಯವಿಷಯವಲ್ಲ.

No comments:

Post a Comment