Thursday 9 February 2017

ಕೃಷ್ಣಮಠಕ್ಕೆ ಮುತ್ತಿಗೆಯಂತೆ !

ಎಲ್ಲೆಲ್ಲಿಂದಲೂ ವಿದ್ಯಾರ್ಜನೆಗಾಗಿ ಸಾವಿರಾರು ಜನರು ಬಂದು ಸೇರುವ ತಾಣ ಉಡುಪಿ. ಇಲ್ಲಿಗೆ ಬಂದವರಿಗೆ ಅಶನ-ವಸತಿಗಳ ಚಿಂತೆಯಿಲ್ಲ. ಕಾರಣ ಇಲ್ಲಿರುವ ಕೃಷ್ಣಮಠ ಮತ್ತು ಅಷ್ಟಮಠಗಳು. ಇಲ್ಲಿಂದ ಹಲವು ಶಾಲೆಗಳಿಗೆ ನಿತ್ಯವೂ ಮಧ್ಯಾಹ್ನಭೋಜನವನ್ನು ಕಳುಹಿಸಿ ಕೊಡಲಾಗುತ್ತಿದ್ದು ದಿನಕ್ಕೆ 40,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಣ್ಣುತ್ತಿದ್ದಾರೆ. ಜಿಜ್ಞಾಸುಗಳಿಗಿಲ್ಲಿ ನಿತ್ಯವೂ ಪ್ರವಚನ ತಾಳಮದ್ದಲೆಗಳೇ ಮೊದಲಾದ ಉತ್ಕೃಷ್ಟ ಕಾರ್ಯಕ್ರಮಗಳಿವೆ. ಇಲ್ಲಿನ ವೇದಿಕೆಯಲ್ಲಿ ಪ್ರದರ್ಶನಗೊಳ್ಳದ ಕಲೆಯಿಲ್ಲ. ಇಲ್ಲಿನ ಶ್ರೀಗಳಿಂದ ಸಮ್ಮಾನಕ್ಕೆ ಪಾತ್ರನಾಗದ ಸತ್ಕಲಾವಿದನಿಲ್ಲ. ವಿದ್ಯಾರ್ಥಿಗಳಿಗೆ ಉದಯೋನ್ಮುಖ ಕಲಾವಿದರಿಗೆ ಇಲ್ಲಿ ವೇದಿಕೆ ಇದ್ದೇ ಇದೆ. ಇಲ್ಲಿನ ವೇದಿಕೆಯಲ್ಲಿ ತನ್ನ ಕಲಾಸೇವೆ ನಡೆಸುವುದು ಪ್ರತಿಯೊಬ್ಬ ಕಲಾವಿದನ ಕನಸಾಗಿರುತ್ತದೆ.
ಹುಲಿವೇಷವೇ ಮೊದಲಾದ ಜಾನಪದ ಕಲಾಕ್ರೀಡೆಗಳಿಗೂ ಇಲ್ಲಿ ಸಿಗುವ ಗೌರವಾದರಗಳು ಮತ್ತೆಲ್ಲೂ ಸಿಗವು. ಪರಿಸರಪ್ರಜ್ಞೆಯ, ವ್ಯಸನಗಳಿಂದ ದೂರವಾಗಿಸುವ - ಹೀಗೆ ನಾನಾವಿಧವಾದ ಹತ್ತುಹಲವು ಕಾರ್ಯಗಳು ಇಲ್ಲಿ ನಿರಂತರ. ಹೀಗೆ ಉಡುಪಿಗೆ ಬಂದು ತಮ್ಮ ಬಾಳನ್ನು ಕಟ್ಟಿಕೊಂಡವರ ಸಂಖ್ಯೆ ಲೆಕ್ಕಕ್ಕೆ ಸಿಗದಿರುವಂಥದ್ದು.

ಇಲ್ಲೆಲ್ಲೂ ಜಾತಿಯ ಪ್ರಶ್ನೆ ಬಂದಿಲ್ಲ. ಯಾರಲ್ಲೂ ಜಾತಿಯನ್ನು ಕೇಳುವುದೂ ಇಲ್ಲ. ದಲಿತರಿಗಾಗಿಯೇ ಹಾಸ್ಟೆಲ್ ಕಟ್ಟಿಸಿದ ಕೀರ್ತಿ ಪೇಜಾವರಶ್ರೀಗಳದ್ದು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ದಲಿತರ ಕೇರಿಗಳಲ್ಲಿ ಅವರು ಮಾಡಿರುವ ಮಾಡುತ್ತಿರುವ ಸತ್ಕಾರ್ಯಗಳು ಸರ್ವವಿದಿತ. ಅನಂತಮೂರ್ತಿಯಂಥವರನ್ನೂ ಕರೆದು ಸಮ್ಮಾನಿಸಿರುವ ಇವರ ಸಹಿಷ್ಣುತೆಗೆ ಸಾತ್ತ್ವಿಕತೆಗೆ ಸಾಟಿಯಿಲ್ಲ.

ಹೀಗೆ, ಉಡುಪಿಯು ಮಹಾವಿದ್ಯಾಕೇಂದ್ರವಾಗಿ, ಸಾಂಸ್ಕೃತಿಕಸ್ಥಾನವಾಗಿ, ಕಲಾರಾಜಧಾನಿಯಾಗಿ ಬೆಳಗುತ್ತಿರುವಲ್ಲಿ ಶ್ರೀಕೃಷ್ಣಮಠದ ಪಾತ್ರ ವಿಶಿಷ್ಟವಾದದ್ದು. ಇದೆಲ್ಲವನ್ನೂ ಮಾಡಲೇಬೇಕೆಂದೇನೂ ನಿಯಮವಿಲ್ಲ. ರಾಜಾಜ್ಞೆಯೂ ಇಲ್ಲ. ಕಾಟಾಚಾರಕ್ಕಾಗಿ ನಡೆಸುವ ಕಾರ್ಯಕ್ರಮಗಳೂ ಇವಲ್ಲ. ಎಲ್ಲವೂ ಇಲ್ಲಿನ ಮಠಾಧೀಶರುಗಳ ಉದಾತ್ತಭಾವದಿಂದ ಹೊಮ್ಮಿರುವವುಗಳು.

ಇಂತಹ ನೂರಾರು ಸದ್ವಿಷಯಗಳು ಮುತ್ತಿಗೆ ಹಾಕಲು ಹೊರಟಿರುವವರಿಗೆ ಕಾಣುವುದಿಲ್ಲ. ಕೇವಲ ಮುತ್ತಿಗೆ ಹೋರಾಟ ಎತ್ತಿಕಟ್ಟುವ ಕೆಲಸ ಇತ್ಯಾದಿಗಳೇ ಇವರ ನಿತ್ಯಜಪವೇ ಹೊರತು, ಹಿಂದೆ ಹೇಳಿದ ಒಂದಾದರೂ ಒಳ್ಳೆಯ ಕೆಲಸವನ್ನು ಮಾಡಿದ ಉದಾಹರಣೆ ಇವರ ಇತಿಹಾಸದಲ್ಲಿ ಕಾಣಸಿಗದು. ಇವುಗಳ ಬಗ್ಗೆ ಒಮ್ಮೆಯೂ ಒಂದು ಮಾತೂ ಇವರ ಮುಖಪಂಕಜದಿಂದ ಉದುರಿಲ್ಲ.

ಅಶಕ್ತೋಹಂ ಗೃಹಾರಂಭೇ ಶಕ್ತೋಹಂ ಗೃಹಭಂಜನೇ (ಮನೆ ಕಟ್ಟಲು ನಾನು ಅಸಮರ್ಥ, ಮನೆ ಮುರಿಯಲು ಸರ್ವಸಮರ್ಥ) - ಎಂಬ ಮಾತಿಗೆ ಒಳ್ಳೆಯ ಉದಾಹರಣೆ. ಇಂಥವರಿಂದ ಸಮಾಜಕ್ಕೆ ಹಾನಿಯೇ ಹೊರತು ಎಳ್ಳಷ್ಟೂ ಒಳಿತಿಲ್ಲ. ಹೋಗಲಿ, ಇವರಿಗಾದರೂ ಆಗುವ ಲಾಭ ಏನು ? ಎರಡು ಸೌಟು ಗಂಜಿ ಹೆಚ್ಚು ಸಿಕ್ಕೀತು, ಆತ್ಮೋನ್ನತಿ ಖಂಡಿತಾ ಆಗಲಾರದು.

No comments:

Post a Comment