Thursday 9 February 2017

ಒಂದು ಗೀತೆ

ಪರರ ದೋಷಗಳನ್ನೆ ಪರಿಕಿಸುವೆಯೇಕಯ್ಯ
ವಿರತದೋಷನೆ ನೀನು ಭರಿತಸದ್ಗುಣನೇ ||

ರಾಕೇಶಬಿಂಬದೊಳು ಕಾಲುಷ್ಯದಾ ಕಂತೆ
ನಾಕೇಶಕಾಯದೊಳು ಕಣ್ಣುಗಳದೇ ಸಂತೆ |
ವೈಕರ್ತನನು ಸುಡುವ ತೀಕ್ಷ್ಣಕರಗಳ ಗಣದಿ
ಲೋಕದೊಳು ಪಿರಿಯರುಂ ದೋಷವಂತರೆ ದಿಟದಿ ||

ಪೊಡವಿಯೊಳಿಹವು ಗರ್ತಗಿರಿಗುಹಾದಿಗಳೆಲ್ಲ
ಕಡಲಿನೊಳೆ ಪುಟ್ಟಿಹವು ಸುಧೆ ಗರಳ ಸುರೆಯೆಲ್ಲ |
ಪುಡುಕಲೆಲ್ಲೆಡೆ ದೊರಕದುತ್ತರವು ವಿಷಮತೆಗೆ
ಬಿಡು ನೀನಿದರ ಚಿಂತೆಯರಿತೊಗ್ಗು ಸಹಜತೆಗೆ ||

ಸುಳಿದಿರಲು ಸರ್ವರೊಳು ಬಗೆಬಗೆಯ ದೋಷಗಳು
ಹಳಿಯುತಿಹೆಯೇತಕೀ ನೈಸರ್ಗನಿಯಮದೊಳು |
ನಳಿನಾಕ್ಷನೊರ್ವನೇ ನಿರ್ದೋಷಿಯೀ ಜಗದಿ
ತೊಳೆಯೆ ತನ್ನಯ ಕೊಳೆಯ ಬದುಕು ಸಾರ್ಥಕ ಋತದಿ ||

ಹಿಂದೆ ರಚಿಸಿದ್ದ ಪದ್ಯವಿದು. ಹಿಂದೋಳದಲ್ಲಿ ಗುನುಗುನಿಸುತ್ತಾ ರಚಿಸಿದ್ದೆ. ಇಂದು ಕೃಷ್ಣಾರ್ಪಣ.

No comments:

Post a Comment